Discover
Vishvadhwani Radio - ಈ ಕವನವನ್ನು ಧ್ವನಿ ರೂಪದಲ್ಲಿ ಆಲಿಸಲು ಕೆಳಗಿನ ಬಟನ್ ಕ್ಲಿಕ್ ಮಾಡಿ
8 Episodes
Reverse
ಒಪ್ಪಿದ್ದೇವೋ ಇಲ್ಲವೋ ಆದರೆ ಅಪ್ಪಿದ್ದಂತೂ ಸತ್ಯ ನಾನು ಮತ್ತು ಅವನು! ಇಬ್ಬರೂ ಅಭೇಧ್ಯ ನನ್ನಲ್ಲಿ ಅವನು ಅವನಲ್ಲಿ ನಾನು ಆದರೂ ಅವನ ಲೆಕ್ಕದ ಮುಂದೆ ನನ್ನದು ತಲೆಕೆಳಗೆ ಎಲ್ಲ ಕ್ಷಣಗಳೂ ಅವ ಮುದ್ದಿಸುವದಿಲ್ಲ ಎದ್ದು ಬಿದ್ದು ನಾನವನ ಅನುಸರಿಸಲೇ ಬೇಕು ಬಹುತೇಕ ಅವನು ನನ್ನ ಪರವಾಗಿರುವುದಿಲ್ಲ ನಿರ್ಧಾರಗಳು ತಪ್ಪಾಗಿ ಗೀರು ಬಾರುಗಳು ಮೂಡಿದ್ದಿದೆ, ಅಪರೂಪಕ್ಕೊಮ್ಮೆಮ್ಮೆ ಜೀವನದ ರುಚಿಗಳನ್ನೇಲ್ಲ ಬಟ್ಟಲಲ್ಲಿ ಬಡಿಸಿದ್ದಿದೆ ಬೇವು ಬೆಲ್ಲಗಳ ಕೂಟ ಅವನದು ಸರಕುಖಾಲಿಯಾದಾಗೆಲ್ಲ ಮತ್ತೆ ಕಿರಣ ಕಾಣಿಸುವ ಆತ್ಮೀಯ ನಿರಂತರ ನಿಶ್ಚಲ ನಿರುಪಾಯ ನಾನು ಮತ್ತು ಬದುಕು ಅವ ಕಲೆಗಾರ ಮಾಯಗಾರ ಅವನ ಯೋಜನೆ ಯೋಚನೆ ಆಟ-ಪಾಠ ಕಾಟ ನೋಟ ಉಹಾತೀತ... ಅಘೋಷಿತ.... *****
ಕಲ್ಲುಗುಡ್ಡದ ಮೇಲಿನ ದೀಪಸ್ತಂಭ
---------------------------------------------
ಕಂಡುಕೊಳ್ಳುವುದು ಸುಲಭವಾಗಿರದೇ
ಎತ್ತಿಟ್ಟ ಒಂದೊಂದು ಹೆಜ್ಜೆಯಲ್ಲೂ
ಮೂಡಿದ ಅತಂತ್ರಗತಿ.
ಹೊಳೆವ ಚಂದ್ರನ ಹಿಡಿಯ ಹೋದ
ಹಕ್ಕಿ ಕೈ
ಯಳತೆಗೆ ನಿಲುಕದ ಬಿಂಬ
ಆ ದೀರ್ಘ ನಿಟ್ಟುಸಿರ ದಿನಗಳಲ್ಲಿ
ಉರಿಯ ಸುಡುಜ್ವಾಲೆಗೆ
ಬೆಂದ ಹೊತ್ತು..
ಕಂಡ ಕಲ್ಲುಗುಡ್ಡದ ಮೇಲಿನ ದೀಪಸ್ತಂಭ
ದಾರಿ ತೋರುತ್ತ ನಿಂತರೂ ನಿಶ್ಚಲ
ನಿಲುವು
ಕಣ್ಣುಗಳಲ್ಲಿ ಅರಳಿ ನಕ್ಕ ನಕ್ಷತ್ರ.
ಬೆಳಕಿನ ಆ ಚುಕ್ಕಿ ಹಚ್ಚಿದರಿವಿನ ಲಯಕ್ಕೆ
ಬದುಕೆಂಬ ಹಾಡಿಯಲಿ
ರಿಮ್ ಜಿಮ್.. ರಿಮ್ ಜಿಮ್
ತನನ.
ಒಂದೊಂದು ಹೆಜ್ಜೆಯಲ್ಲೂ ಮೂಡಿದ
ಹೊಸ ಗತಿ, ಹದಗೊಂಡ ಹುರುಪು
ಲೋಕದ ಸದ್ದಿಗೆ ನೂಪುರದ ಇಂಪೇ
ಹಿಮ್ಮೇಳವಾಗಿ
ಕೆಂಪುತುಟಿಗಳ ಓರೆನೋಟದಲ್ಲಿ
ಜಗದಿರುಳು ಮಂಪರಿನಲ್ಲಿ ಮುಳುಗಿ ಹೋದ ಹೊತ್ತು
ಆತ್ಮಮೀಟುವ ತಂತಿಯ ಹಿಡಿದು
ಬಂದಿದ್ದ ಅಂತರಾತ್ಮದ ಬುಡಬುಡಕೆಯವ.
ಗಿಣಿನುಡಿಸುವವನ
ಆಕಾಶದವಕಾಶದ ತತ್ವವದು ಪಾತಾಳ ಮರ್ಮ
ಹಕ್ಕಿ ಹೃದಯದಲ್ಲಿ ನೆಟ್ಟವು.
ಅರಿವಿನ ವ್ಯಸನಕ್ಕೆ
ಸುಡು ಸುಡು ಬೆಂಕಿಯಲಿ
ಹದವಾದ ಬೇಯುವಿಕೆ
ಸರಸವೂ ಮೋಕ್ಷದೊಲುಮೆಯ
ತೋರುವ ಕುಲು ಕುಲುಮೆ.
ನುಡಿದ ನುಡಿಸುತ್ತಲೇ ಹೋದ
ಹಕ್ಕಿಯ ಕೊರಳು, ಪಕ್ಕೆ, ಪಂಕಗಳು
ತಿಳಿವಿನ ಶೃತಿ ಹಿಡಿದು ಮೀಟಿ
ನಭದೆತ್ತರಕ್ಕೆ ಚಿಮ್ಮಿದ ರಾಗ
ಉರಿಸಿ, ದಹಿಸಿ ಮೂಡಿದಾ ಬೆಳಕು..
ಏಕಾಏಕಿ ಬಾನಂಗಳದಿ
ಕಾರ್ಮೋಡಗಳ ಮುಸುಕು
ಎದ್ದ ಕೋಲಾಹಲ
ಪ್ರಳಯದಾರ್ಭಟ, ರುದ್ರನರ್ತನ.
ಭಾವನೆಗಳು ಹೂತು
ಮೂಡಿಸಲಾಗದ ಎದೆಗಬ್ಬ ಸೋತು
ಭಾವದುಸಿರು ಬೋರಲಾಗಿ
ಬಡಿದ ಬಾಗಿಲಿಗಿಲ್ಲ ಕಿವಿ
ಸದ್ದು ಮಾಡುತ್ತಿಲ್ಲ ಎದೆಯ ಕುದಿ
ಕಳೆದುಕೊಂಡ ಒಣಎಲೆಗಳ ಮೇಲೆ ಮರಕ್ಕಿಲ್ಲ
ಮರುಕ.
ನಿಂತೇ ಇರುವುದಿನ್ನು ಹಕ್ಕಿಯ
ಜೊತೆ ನಿಶ್ಚಲ ಭೂಮಿ
ತೊನೆದು ತೂಗದ ಗೊನೆಬಾಳೆ ಮತ್ತು ಕ್ರಮಿಸದೇ ಹಾಗೇ
ಉಳಿದು ಹೋದ ಕಾಲುದಾರಿ
Anita thakode Kavana ಅನಿತಾ ಪಿ. ತಾಕೊಡೆ
ಸಾಹೇಬನ ಕಡುಪ್ರೀತಿ- Vibha Purohit Poem
ವ್ಯಕ್ತಗೊಳ್ಳುತ್ತೇನೆ ನಾನು
ಅವ್ಯಕ್ತಕ್ಕೆ ತಳ್ಳುವ ಕೈಗಳ
ಕಿರುಬೆರಳ ಸಂದಿಯಲಿ ಜುಗುಳಿ
ನಕ್ಷತ್ರ ನಿಹಾರಿಕೆಗಳ
ಜೊತೆಗೂಡುತ್ತೇನೆ.
ನಿರ್ವಾತದಲ್ಲೂ ನಿರತ ಉಸಿರಾಡುತ್ತಾ
ಪದವಿನೋದ ಗಾನ ಪಾಡುತ್ತಾ
ತಿವಿಯ ಬಂದವರೆಡೆಗೆ
ನಸುನಗುತ್ತ ಪ್ರೀತಿತೆನೆ
ಕೊಯ್ಯುತ್ತೇನೆ
ಎಲ್ಲೋ ಹುಟ್ಟಿ
ಮತ್ತೆಲ್ಲೋ ಸಾಯುವ ಹಕ್ಕಿ
ಹಾರುವ ಖುಷಿಯಲ್ಲೆ
ಬದುಕಿನಂದವ ಪಾಡುವ ಪರಿ
ಕನಸುತ್ತೇನೆ.
ರಹದಾರಿಯ ಅರಿವಿಲ್ಲದೆಯೂ
ಹಾರುವ ಬಣ್ಣದ ಚಿಟ್ಟೆ
ಬೆನ್ನು ಹತ್ತಿ
ಕಾಲಬದಲಾದಂತೆ
ಬಣ್ಣ ಬದಲಾಯಿಸುವ
ಗೋಸುಂಬೆಗಳ ಅಂಟು ಜಿಹ್ವೆಯ
ಜೊಲ್ಲಿಗೆ ನಿಲುಕದೆ
ಬೆಳಕಿನೆಡೆಗೆ ಜಿಗಿಯುವ
ಹಾತೆಯಾಗುತ್ತೇನೆ
ಉರಿವ ಜ್ವಾಲೆಗೆ ಮೈ ಸುಟ್ಟುಕೊಂಡು
ಅಗ್ನಿದಿವ್ಯದ ಎದುರು ಸ್ಫುಟಗೊಳ್ಳುತ್ತೇನೆ
ಮುಕ್ತಳಾಗುತ್ತೇನೆ ನಾ ..ನು..
*ನಾಗರೇಖಾ ಗಾಂವಕರ
ಕವಿತೆಗೆ- ನಾ ಮೊಗಸಾಲೆ ಅವರ ಕವಿತೆಯನ್ನು ಆಲಿಸಿ
ಎದೆಯಮೇಲೆ ಹೂವರಳಿಸುವವನ ಕೈಗೆ
ತಲ್ಲಣಗಳು ತಾಕುವುದಿಲ್ಲ
ಸೂರ್ಯ-ಚಂದ್ರ ತಾರೆಗಳೆಲ್ಲವೂ
ನಿಲುಕುತ್ತವೆ ಅವನ ಬೆರಳಿಗೆ
ನಕ್ಷತ್ರ ನೀಲಿಯಾಗಿ
ಆಕಾಶ ಕೆಂಪಗಾಗಿ!
ಎಲ್ಲವೂ ಅವನಿಷ್ಟದಂತೆಯೇ ಇಲ್ಲಿ
ಪದಗಳಿಲ್ಲದ ಕವಿತೆ ಎದೆತುಂಬ
ತಂದು ಕೂರಿಸುತ್ತಾನೆ ಎಲ್ಲೆಂದರಲ್ಲಿ
ಅಲ್ಲೆಲ್ಲೋ ಹಾರಾಡುವ ಚಿಟ್ಟೆಯ
ಅಂಗಳದ ಮೈಮೇಲಿನ ರಂಗೋಲಿ
ನುಣುಪಾದ ಪಾದಗಳ ಮೇಲೆ!
ನಾಜೂಕು ಪದರಗಳೊಳಗೆ
ಚುಚ್ಚಿದ ಬಣ್ಣಗಳು ತನಗಂಟದಂತೆ
ಅಂತರವ ಕಾಯ್ದುಕೊಳ್ಳುತ್ತಾನೆ
ಮರಿಜಿಂಕೆಯೊಂದು ಕಾಲಮರೆತು
ಕಣ್ಣುಮಿಟುಕಿಸುತ್ತದೆ
ನಿಂತಸಮಯದ ಒಡಲಿನಲ್ಲಿ
ಸದಾ ಹಸಿರಾದ ಹುಲ್ಲುಗಾವಲು!
ಶಿವನ ಶಿರದಿಂದಿಳಿದ ಗಂಗೆ
ಸ್ಪರ್ಶಕ್ಕೆ ಸಿಕ್ಕುತ್ತಾಳೆ
ಮೂರ್ತ-ಅಮೂರ್ತಗಳೆಲ್ಲವೂ
ಅವನಾಜ್ಞೆಯಂತೆಯೇ ಇಲ್ಲಿ
ಸಾಲುಸಾಲು ಕತೆಗಳು
ಬಿಡಿಬಿಡಿಯಾಗಿ ಹರಡಿಕೊಳ್ಳುತ್ತವೆ
ಬಾಲಕೃಷ್ಣನ ನವಿಲುಗರಿ
ಬೆನ್ನಮೇಲೆ ಕಚಗುಳಿಯಿಡುವಾಗ
ಮೊಲದಮರಿಯೊಂದು ಕುತ್ತಿಗೆಯ ಮುದ್ದಿಸುತ್ತದೆ
ಕೀಗೊಂಚಲಿನಿಂದ ಹೊರಟ
ರೆಕ್ಕೆಯೊಂದು ಬಯಲ ತಲುಪಿದರೆ
ಆಗಸದಿಂದಿಳಿದ ಅದೃಷ್ಟದೇವತೆ
ಮುಂಗೈಮೇಲೆ!
ನೆನಪ ಹಿಡಿದಿಡುವ ಕಾಯಕದಲ್ಲಿ
ನೋವಿನ ಮಾರಾಟ ರಿಯಾಯಿತಿಯಲ್ಲಿ
ಹೊಕ್ಕುಳಿಗೆ ಸೂಜಿ ಚುಚ್ಚುವವನ
ತೆರೆದ ಎದೆಯಮೇಲೆ
ಬಣ್ಣದ ಹೂಗಳ ಹರಡಬೇಕಿದೆ;
ಪರಿಮಳದ ಎಳೆಯೊಂದ ಎಳೆಯಬೇಕಿದೆ!
ಸೂಜಿಗಂಟಿದ ಸತ್ಯಗಳೆಲ್ಲ
ಬಳ್ಳಿಯಾಗಿ ಹಬ್ಬಿಕೊಳ್ಳಲಿ
ಹಚ್ಚೆ ಹಾಕುವವನ ಹೃದಯದಲ್ಲಿ
Anjana Hegde Poem- Kambali Hulu Kannada Kavana in https://vishvadhwani.com/ Website







